ವೃಶ್ಚಿಕ ರಾಶಿ ಯುಗಾದಿ ವರ್ಷ ಭವಿಷ್ಯ ಮತ್ತು ಫಲಾಫಲ
ದುಡಿದ ದುಡ್ಡು ಕರಗುವ ಸಮಯವಿದು. ಹೌದು, ಏಕೆಂದರೆ ಈ ವರ್ಷದ ಯುಗಾದಿಯಿಂದ ಗಳಿಸಿದ್ದ ದುಡ್ಡನ್ನು ಕಳೆದುಕೊಂಡಂತಾಗಿ ಚಡಪಡಿಸುವಂತಾಗಿದೆ ಈ ವೃಶ್ಚಿಕ ರಾಶಿಯವರಿಗೆ.
ಮೊದಲೇ ಸಾಡೇಸಾತಿಯ ತಿರುಗುಣಿಯಲ್ಲಿ ತಿರುಗುತ್ತ ಜೀವನವನ್ನು ಎಚ್ಚರಿಕೆಯಿಂದ ನಡೆಸಿಕೊಂಡು ಹೋಗುತ್ತಿರುವ ಈ ರಾಶಿಯವರು ಖರ್ಚಿನ ಲೆಕ್ಕ ಇಟ್ಟುಕೊಳ್ಳಬೇಕು. ಸಾಲ ಸಿಗುತ್ತದೆ ಎಂದುಕೊಂಡು ಸಿಕ್ಕಾಪಟ್ಟೆ ಸಾಲ ಮಾಡುವಂತಿಲ್ಲ. ಕೊಡುತ್ತೇನೆಂದರೂ ತೆಗೆದುಕೊಳ್ಳುವಂತಿಲ್ಲ. ತೆಗೆದುಕೊಂಡರೆ ನೀರಿನ ಹಾಕಿದಂಗೆನೇ ಎನ್ನಬಹುದು. ಆ ರೀತಿಯಲ್ಲಿ ಆ ಹಣ ಖರ್ಚಾಗಿ ಗುಳುಂ ಆಗುತ್ತದೆ.
ಈ ರಾಶಿಯ ವಿಶಾಖಾ ನಕ್ಷತ್ರದವರು ಮೊದಲ ನಾಲ್ಕು ತಿಂಗಳು ಅತ್ಯುತ್ತಮ ಸಮಯದನುಭವ ಪಡೆಯುತ್ತಾರೆ. ನಂತರ ಅಷ್ಟಕ್ಕಷ್ಟೇ ಜೀವನ ಎನ್ನುವಂತಾಗುತ್ತದೆ. ಕಡೆಯ ಎಂಟು ತಿಂಗಳು ಮಾತ್ರ ಜೋಪಾನವಾಗಿ ಜೀವನವನ್ನು ಸಾಗಿಸಿಕೊಂಡು ಹೋಗಬೇಕು. ಸ್ವಲ್ಪ ಸುಖಕರ ಸಮಯ ಬಂದರೂ ಹೆಚ್ಚು ಇರೋದಿಲ್ಲ. ಹೀಗಾಗಿ ಜಾಗೃತೆಯಿಂದಿರಿ. [ಹಠಮಾರಿ ಸ್ವಭಾವದ ವಿಶಾಖಾ ನಕ್ಷತ್ರದವರು]
ಇನ್ನು ಅನುರಾಧಾ ನಕ್ಷತ್ರದವರಿಗೆ ಯುಗಾದಿಯಿಂದ ಸೂಪರ್ ಆಗಿಯೇ ಜೀವನ ಸಾಗುತ್ತಿದ್ದು, ಇದೇ ರೀತಿ ನಾಲ್ಕು ತಿಂಗಳು ಸುಖದನುಭವ. ನಂತರದ ನಾಲ್ಕು ತಿಂಗಳು ಕೊಂಚ ಇಳಿಮುಖವೆನಿಸಿದರೆ ಕ್ರಮೇಣ ಮುಂದಿನ ನಾಲ್ಕು ತಿಂಗಳ ಮತ್ತೆ ಜೀವನ ಸರಿದಾರಿಗೆ ಸಾಗಲಾರಂಭಿಸುತ್ತದೆ.
ಆದರೆ ಜ್ಯೇಷ್ಠಾ ನಕ್ಷತ್ರದವರಿಗೆ ಮಾತ್ರ ಸಾಡೇಸಾತಿಯ ಹೊಡೆತಕ್ಕೆ ಸಿಲುಕಿ ವಿಲವಿಲನೆ ಒದ್ದಾಡುವ ದುಃಸ್ಥಿತಿ ಇದೆ ಎನ್ನಬಹುದು. ಏಕೆಂದರೆ ಅತ್ತ ಶನಿಕಾಟ ಇತ್ತ ಗುರುಬಲ ಕೈ ಹಿಡಿಯುತ್ತಿಲ್ಲ ಹೀಗಾಗಿ ವರ್ಷದ ಮೊದಲ ಎಂಟು ತಿಂಗಳು ಸುಖಾಸುಮ್ಮನೇ ಗೊಂದಲಗಳಲ್ಲೇ ಜೀವನ ಕಳೆಯುವಂತಾಗುತ್ತದೆ. ಆದರೆ ಆಗಸ್ಟ್ ನಂತರ ಗುರುಬಲ ಬಂದ ಕೂಡಲೇ ಜೀವನ ಮಹತ್ವದ ತಿರುವು ಪಡೆದುಕೊಳ್ಳುತ್ತದೆ.
ಇದೇ ರೀತಿ ಜನವರಿಯಿಂದ ಶನಿದೇವನು ಲಾಭ ಸ್ಥಾನಕ್ಕೆ ಬರುವುದರಿಂದ ಒಂದು ರೀತಿಯಲ್ಲಿ ಸುಖ ಮತ್ತೊಂದು ರೀತಿಯಲ್ಲಿ ದುಃಖ ಎರಡೂ ಉಂಟಾಗುತ್ತದೆ . ಏಕೆಂದರೆ ಗುರು ಕೊಡಲು ಬಂದರೆ ಶನಿ ಕೊಡಲು ಬಿಡಲ್ಲ. ಹೀಗಾಗಿ ಇದೊಂದು ವಿಷಯದಲ್ಲಿ ಮಾತ್ರ ಸ್ವಲ್ಪ ಜಾಗ್ರತೆ ಇರಲಿ. ಒಟ್ಟಿನಲ್ಲಿ ಈ ವರ್ಷ ವೃಶ್ಚಿಕ ರಾಶಿಯವರಿಗೆ ಶೇ.80ರಷ್ಟು ಶುಭಫಲವಿದೆ. [ವೃಶ್ಚಿಕ ರಾಶಿಗೆ ಕೈ ಕೊಟ್ಟ ಗುರುಬಲ, ಮುಂದೇನು?]