ಅ.8ರಂದು ಚಂದ್ರಗ್ರಹಣ : ಯಾವ ರಾಶಿಗೆ ಏನು ಫಲ?
ಈ ವರ್ಷದ ಕೊನೆಯ ಖಗ್ರಾಸ ಚಂದ್ರಗ್ರಹಣ ಇದೇ ತಿಂಗಳಿನ ತಾ. 8, ಬುಧವಾರ ಮಧ್ಯಾಹ್ನ ಜರುಗಲಿದೆ. ಆದರೆ ಇದು ಹಗಲು ಹೊತ್ತಿನಲ್ಲಿ ಸಂಭವಿಸುವುದರಿಂದ ಬಹಳಷ್ಟು ಜನ ಅಷ್ಟೇನೂ ಮಹತ್ವ ನೀಡುವುದಿಲ್ಲ. ಏಕೆಂದರೆ ಹಗಲಿನಲ್ಲಿ ಆಗುವ ಚಂದ್ರಗ್ರಹಣಕ್ಕೆ ಯಾವುದೇ ಆಚರಣೆಗಳಿರಲ್ಲ. ಇದೂ ಅಲ್ಲದೇ ಇದು ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸುವುದಿಲ್ಲ.
ಸಾಮಾನ್ಯವಾಗಿ ಹುಣ್ಣಿಮೆಯ ರಾತ್ರಿಯಂದು ಚಂದ್ರಗ್ರಹಣವಾದಾಗ ಅಮವಾಸ್ಯೆಯಂತೆ ಎಲ್ಲೆಡೆ ಕತ್ತಲೆ ಆವರಿಸುತ್ತದೆ. ಆದರೆ ಈ ಗ್ರಹಣವು ಹಗಲಿನ ಹೊಂಬೆಳಕಿನಲ್ಲಿ ಮಧ್ಯಾಹ್ನ 2.44ಕ್ಕೆ ಸ್ಪರ್ಶವಾಗುತ್ತದೆ. ಈ ಕೇತುಗ್ರಸ್ತ ಚಂದ್ರಗ್ರಹಣವು ಸಂಜೆ 6.05ಕ್ಕೆ ಮುಗಿಯಲಿದೆ. ಈ ಸಮಯದ ಮಧ್ಯದಲ್ಲಿ ಸಂಜೆ ಸರಿಯಾದ 4.25ಕ್ಕೆ ಗ್ರಹಣದ ಮಧ್ಯಕಾಲವಾಗಲಿದೆ. ಗ್ರಹಣ ಕಾಲದಲ್ಲಿ ಕೇತು ಗ್ರಹವು ಸರಿಸುಮಾರು 10 ನಿಮಿಷ ಚಂದ್ರನಿಗೆ ಖಗ್ರಾಸ ಗ್ರಹಣ ಸ್ಥಿತಿಯಲ್ಲಿಡಲಿದ್ದಾನೆ.
ನಮ್ಮೀ ಬೆಂಗಳೂರಿನಲ್ಲಿ ಮತ್ತು ಆಂಧ್ರದ ಗಡಿಯಲ್ಲಿರುವ ರಾಯಚೂರು ಭಾಗಗಳಲ್ಲಿ ಕೇವಲ 1 ನಿಮಿಷ ಖಗ್ರಾಸ ಚಂದ್ರಗ್ರಹಣ ಗೋಚರಿಸಲಿದೆ. ಆದರೆ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಬೀದರ್ ಜಿಲ್ಲಾದ್ಯಂತ 3 ನಿಮಿಷಕ್ಕೂ ಹೆಚ್ಚು ಕಾಲ ಈ ಗ್ರಹಣ ಹಗಲಿನಲ್ಲಿ ಕಾಣಿಸಲಿದೆ. [ಚಂದ್ರ ಗ್ರಹಣದ ಪೋಸ್ಟ್ ಮಾರ್ಟಮ್]
ಅಮೆರಿಕ, ಆಸ್ಟ್ರೇಲಿಯಾ, ಏಶಿಯಾ ಖಂಡದ ಪೂರ್ವದೇಶಗಳಲ್ಲಿ ಈ ಗ್ರಹಣವು ರಾತ್ರಿಯಲ್ಲಾಗುವುದು. ಈ ದೇಶದವರು ಗ್ರಹಣಾಚರಣೆ ಮಾಡಬೇಕು. ಮಹಾರಾಷ್ಟ್ರದ ನಾಗಪುರ, ತಮಿಳುನಾಡು, ಮಧ್ಯಪ್ರದೇಶ, ರಾಜಸ್ತಾನದ ಕೆಲಭಾಗ, ದೆಹಲಿ, ಉತ್ತರ ಮತ್ತು ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಲದಲ್ಲಿ ಬರೋಬ್ಬರಿ 10 ನಿಮಿಷದ ಖಗ್ರಾಸ ಚಂದ್ರಗ್ರಹಣ ಹಗಲಿನಲ್ಲಿ ಕಾಣಿಸಲಿದೆ. [ಸಣ್ಣಕಥೆ : ಗ್ರಹಣ]
ಗ್ರಹಣ ಕಾಣದ ಸ್ಥಳಗಳಲ್ಲಿ ಗ್ರಹಣಾಚರಣೆ ಮಾಡಲೇಬೇಕೆನ್ನುವವರು ಬುಧವಾರ ಬೆಳಗಿನ 8 ಗಂಟೆಯೊಳಗಾಗಿ ಉಪಹಾರ ಸೇವಿಸಬಹುದು. ಗ್ರಹಣ ಸಮಯದಲ್ಲಿ ಸ್ನಾನ ಮಾಡಿಕೊಂಡು ಪೂಜಾದಿ ಕಾರ್ಯಗಳಲ್ಲಿ ಪಾಲ್ಗೊಳ್ಳಬಹುದು. ಗರ್ಭಿಣಿಯರು, ಬಾಣಂತಿಯರು, ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವವರು ಮತ್ತು ಪುಟಾಣಿಗಳು ಕೂಡ ಗ್ರಹಣಾಚರಣೆ ಮಾಡಬಹುದು.
ಅಂದು ರೇವತಿ ನಕ್ಷತ್ರಕ್ಕೆ ಹೊಂದಿಕೊಂಡು ಮೀನ ರಾಶಿಯಿರುವ ಸಮಯದಲ್ಲಿ ಕೇತುವು ಚಂದ್ರನಿಗೆ ಗ್ರಹಣ ಸ್ಥಿತಿ ತರುವುದರಿಂದ ಮೀನ ರಾಶಿಯವರಿಗೆ ಸ್ವಲ್ಪ ತೊಂದರೆಯಾಗಬಹುದು. ಇದಕ್ಕೆ ಸೂಕ್ತ ಪರಿಹಾರ ಮೀನ ರಾಶಿಯವರು ಮಾಡಿಸಿಕೊಂಡರೆ ಒಳ್ಳೆಯದು.
ವೃಷಭ, ಮಿಥುನ, ತುಲಾ ಮತ್ತು ಮಕರ ರಾಶಿಯವರಿಗೆ ಈ ಗ್ರಹಣವು ಶುಭಫಲ ತಂದೊಡ್ಡಿದರೆ, ಮೇಷ, ಸಿಂಹ, ವೃಶ್ಚಿಕ ಹಾಗೂ ಕುಂಭ ರಾಶಿಯವರಿಗೆ ಶುಭ-ಅಶುಭ ಫಲವಿದೆ. ಆದರೆ ಕರ್ಕ, ಕನ್ಯಾ, ಧನಸ್ಸು ಮತ್ತು ಮೀನ ರಾಶಿಯವರಿಗೆ ಸ್ವಲ್ಪ ತೊಂದರೆಯೇ ಆಗಲಿದೆ. ಆದರೂ ಗ್ರಹಣದಿಂದ ತೊಂದರೆಯಾಗುವ ರಾಶಿಯವರು ಸೂಕ್ತ ಪರಿಹಾರ ಮಾಡಿಕೊಂಡರೆ ಉತ್ತಮ. ಈ ಗ್ರಹಣದ ವೇದವನ್ನು ಅಂದು ಬೆಳಗಿನ 3.30ರಿಂದಲೇ ಆಚರಿಸಬೇಕಾಗುತ್ತದೆ.