2016 ವರ್ಷ ಭವಿಷ್ಯ : ನಿಮ್ಮ ರಾಶಿಗೆ ಏನಿದೆ ಗೊತ್ತಾ?
ಮೊದಲಿಗೆ, ಎಲ್ಲ ಓದುಗ ಭಕ್ತಮಿತ್ರರಿಗೆ 2016ರ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಅಂತೂ-ಇಂತೂ ಮತ್ತೊಂದು ಹೊಸ ವರ್ಷದಲ್ಲಿ ನಾವು ಕಾಲಿಟ್ಟಿದ್ದೇವೆ. ಎಂದಿನಂತೆ ಹೊಸ ವರ್ಷದಲ್ಲಿ ಏನಾದರೊಂದು ಸಾಧನೆ ಮಾಡಬೇಕು ಅಥವಾ ಹೊಸದರ ಯೋಜನೆಗೆ ಚಾಲನೆ ನೀಡಬೇಕು ಎಂದು ಯೋಚಿಸುವವರು ಹಲವಾರು ಜನರು.
ಆದರೆ, ನಮ್ಮ ಯೋಜನೆ ಮತ್ತು ಯೋಚನೆಗಳಿಗೆ ಗ್ರಹಗತಿಗಳ ಬಲಾಬಲ ಹೆಂಗಿದೆ ಎಂಬುದನ್ನು ನೋಡಿಕೊಂಡವರು ಬುದ್ಧಿವಂತರು. ನಾವೇನು ವರ್ಷಾವರ್ಷ ಭವಿಷ್ಯ ನೋಡಿಯೇ ಎಲ್ಲ ಕೆಲಸ-ಕಾರ್ಯ ಮಾಡುತ್ತೇವೆಯಾ ಎಂದು ನಿರ್ಲಕ್ಷ್ಯದಿಂದ ಹೇಳುವವರಿಗೆ "ಎಲ್ಲಮ್ಮನ ಗುಡ್ಡದ ಮ್ಯಾಲ್ ಮುಲ್ಲಾಂದ್ ಏನ್ ಕೆಲಸ" ಎನ್ನಬೇಕಾಗುತ್ತದೆ.
ಯಾಕೆಂದರೆ, ನಾಲ್ಕು ಕಾಳು ಅಕ್ಷತೆ ತಲೆ ಮೇಲೆ ಬಿದ್ರೆ ಸಾಕು ಎನ್ನುವವರಿಗೆ, ಹೊಸ ಉದ್ಯೋಗ ಸಿಕ್ಕಿ ಕೈ ತುಂಬಾ ದುಡ್ಡು ಸಂಪಾದಿಸಿಕೊಂಡು ಸ್ವಂತ ಕಾಲ ಮೇಲೆ ನಿಲ್ಲಬೇಕೆಂದುಕೊಂಡವರಿಗೆ, ಸಾಲ-ಸೋಲ ತೀರಿಸಲು ಈ ವರ್ಷವಾದರೂ ಸಾಧ್ಯವಾ ಎನ್ನುವವರಿಗೆ, ಸ್ವಂತ ಸೂರಿನಡಿ ಸುಖನಿದ್ರೆ ಮಾಡಬೇಕೆಂದವರಿಗೆ, ಸೀಮಂತ ಕಾರ್ಯಕ್ಕೆ ಕಾಯುತ್ತಿರುವವರಿಗೆ ಹೊಸ ವರ್ಷದ ಭವಿಷ್ಯ ತಿಳಿದುಕೊಳ್ಳಬೇಕು ಎನ್ನುವ ಉತ್ಸಾಹ -ಕುತೂಹಲ ಅತೀವವಾಗಿರುತ್ತದೆ. [ಕಣ್ಣು ಕಾಣದ ಅಜ್ಜಿ ಹೇಳಿದ ಭವಿಷ್ಯ ಸುಳ್ಳಾಗಿದ್ದೇ ಇಲ್ಲ]
ಆದರೆ, ಎಲ್ಲವೂ ಇದ್ದು ಇನ್ನಷ್ಟು ಸಾಧಿಸಬೇಕೆನ್ನುವವರು ಮಾತ್ರ ಬಂದಂಗೆ ಬರಲಿ ಎನ್ನುವವರ ಸಂಖ್ಯೆಯೂ ನಮ್ಮಲ್ಲಿ ಜಾಸ್ತಿಯೇ ಇದೆ. ಏಕೆಂದರೆ, ಇಂಥವರು ಚಿಕಿತ್ಸೆ ನೀಡಿದ ವೈದ್ಯರನ್ನು ಮತ್ತು ವಿದ್ಯೆ ನೀಡಿದ ಗುರುಗಳನ್ನೇ ಮರೆಯುವಂತಹ ದುರ್ಗುಣದವರಾಗಿರುತ್ತಾರೆ. ಹೀಗಾಗಿ, ನಾನೊಬ್ಬ ಚೆನ್ನಾಗಿದ್ದರೆ ಸಾಕು, ಉಳಿದವರ ಉಸಾಬರಿ ನನಗೇಕೆ ಎನ್ನುವ ಸ್ವಭಾವದವರಂಥವರಿಂದಲೇ ನಮ್ಮ ಪುರಾತನ ಜ್ಯೋತಿಷ್ಯ ಮತ್ತು ಭವಿಷ್ಯದ ಜ್ಞಾನ ಮರೆಯಾಗುತ್ತಿದೆ. ಇಂಗ್ಲಿಷ್ ಜ್ಯೋತಿಷ್ಯ ಹೆಚ್ಚು ಪ್ರಚಲಿತದಲ್ಲಿ ಬರುತ್ತಿದೆ.
ಇರಲಿ, ಒಂದು ಸಣ್ಣ ಬೀಜ ಹೇಗೆ ದೊಡ್ಡ ಮರವಾಗಿ ಬೆಳೆಯುತ್ತದೆಯೋ ಅದೇ ರೀತಿ ಜ್ಯೋತಿಷ್ಯದಿಂದ ಎಲ್ಲವನ್ನೂ ತಿಳಿದುಕೊಂಡು ದೊಡ್ಡ ಮರವಾಗಿ ಬೆಳೆಯುವದು ಹೇಗೆ ಎಂಬುದನ್ನು ಅರ್ಥ ಮಾಡಿಕೊಂಡು ಜೀವನಶೈಲಿ ನಡೆಸುವವನನ್ನೇ ಪುಣ್ಯವಂತನೆನ್ನಬಹುದು.
ಇದೇನು ಸಾಮೀ ಹಿಂಗತೀರಿ ಎನ್ನುವವರಿಗೆ "ಸಾಮೇರು ಮೊದಲೇ ಬೆಂಕಿಯಿದ್ದಂಗೆ, ಬರೀ ಸುದ್ದಿಗೆ ಬಂದರೇನೆ ಜೀವನದಲ್ಲಿ ಉರಿ ಹತ್ತತ್ತೆನ್ನುತ್ತಾರೆ" ಸಾಮೇರು. ಯಾಕೆಂದರೆ ಸಾಮೇರ ಜಂಗಮವಾಣಿ ಸುಗ್ರೀವನ ಆಜ್ಞೆಯಿದ್ದಂಗೆ.
ಪ್ರಾಣಿ- ಪಕ್ಷಿಗಳಿಗೇನೂ ಭವಿಷ್ಯವಿಲ್ಲವಾ ಎನ್ನುವವರಿಗೆ, ಮನುಷ್ಯರಂತೆ ಅವುಗಳಿಗೂ ಐದು ಬೆರಳಿಗಳಿವೆ. ಹಾಗಾದರೆ ಅವುಗಳು ಕೂಡ ಐದು ಬೆರಳುಗಳಿಂದ ನಾವು ಮಾಡಿದಂತಹ ಕೆಲಸ ಮಾಡುತ್ತವೆಯಾ ಎನ್ನುತ್ತಾರೆ ಸಾಮೇರು.
ಇರಲಿ ಬಿಡಿ ಸಾಮೇರೆ, ನಾನೇನು ಹಂಗಂದ್ನಾ ಎನ್ನುವವರಿಗೆ, ಮೊಸರು ಕಳ್ಳ ಎಂದರೆ ಬಾಯಿ ಒರೆಸಿಕೊಂಡ್ರಂತೆ ಎನ್ನುತ್ತಾರೆ ಸಾಮೇರು. ಯಾಕೆಂದರೆ ಕಾಲನ ಹೊಡೆತಕ್ಕೆ ಸಿಕ್ಕಿ ಹಾಕಿಕೊಳ್ಳುವುದನ್ನು ತಡೆಯುವುದು, ವರ್ಷ ಭವಿಷ್ಯ ತಿಳಿದುಕೊಳ್ಳುವುದರಿಂದ ಮಾತ್ರ ಸಾಧ್ಯ ಎಂಬುದು ಮಾತ್ರ ಸತ್ಯ.
ನಾವೆಲ್ಲಾ ವರ್ಷ ಭವಿಷ್ಯಕ್ಕಿಂತ ಬೇರೆಯದನ್ನೇ ಹೆಚ್ಚಾಗಿ ನಂಬ್ತೇವೆ ಸಾಮೀ ಎನ್ನುವವರಿಗೆ, ಸಾಮೇರು "ಮಾಟ ಮಂತ್ರ ಮನೆತನಕ ದೇವರು ಕೊನೆ ತನಕ" ಎಂಬುದು ಗೊತ್ತಿಲ್ಲೇನಪಾ ಎನ್ನಬೇಕಾಗುತ್ತದೆ.
ಇರಲಿ, ಈಗ ಹನ್ನೆರಡು ರಾಶಿಗಳ ವರ್ಷ ಭವಿಷ್ಯ ಹೆಂಗಿದೆ ಎಂಬುದನ್ನು ತಿಳಿದುಕೊಳ್ಳುವ ಮೊದಲು, ಮೇಷ, ಕರ್ಕ, ಸಿಂಹ, ತುಲಾ, ವೃಶ್ಚಿಕ, ಧನುಸ್ಸು ರಾಶಿಗಳವರು ತಮ್ಮ ಈಗಿರುವ ಸಮಸ್ಯೆ ಮತ್ತು ತೊಂದರೆಗಳನ್ನು ಮೊದಲೇ ನೋಟ್ ಮಾಡಿಟ್ಟುಕೊಳ್ಳಿ. ವರ್ಷ ಭವಿಷ್ಯದಲ್ಲಿ ನೀಡಲಾಗುವ ಫಲಾಫಲಗಳಿಂದ ತೊಂದರೆಗಳು ಮತ್ತು ಸಮಸ್ಯೆಗಳು ಕೊಂಚ ಕಮ್ಮಿಯಾಗಬಹುದು.
ಮುಂದಿನ ಲೇಖನದಲ್ಲಿ : ಅಷ್ಟಮ ಶನಿಕಾಟದಲ್ಲಿರುವ ಮೇಷ ರಾಶಿಯವರ 2016ರ ವರ್ಷ ಭವಿಷ್ಯ ಬರಲಿದೆ, ನಿರೀಕ್ಷಿಸಿ.