ಸಾಡೇಸಾತಿ : ಶನಿಕಾಟಕ್ಕೆ ಸುಲಭ ಪರಿಹಾರಗಳು
ಶನಿದೇವನ ಕಾಡಾಟ ಯಾರಿಗೂ ತಪ್ಪಿದ್ದಲ್ಲ ಎಂಬ ವಿಷಯ ಈಗಾಗಲೇ ನಿಮಗೆ ಗೊತ್ತಾಗಿದೆ. ಕೆಲವರಿಗೆ ಶನಿದೇವನ ಕಾಡಾಟದಿಂದ ಜೀವನವೇ ಬೇಸರವೆನಿಸುತ್ತಿರುತ್ತದೆ. ಶನಿಕಾಟದಲ್ಲಿ ಅನ್ಯಾಯ, ಅನೀತಿಯಿಂದ ಜೀವನ ಮಾಡಬೇಡಿ ಎಂದು ಹೇಳುವುದೇಕೆಂದರೆ, ಇಂತಹ ಕೆಲಸಗಳಿಗೆ ಶನಿಮಹಾತ್ಮನೇ ಪ್ರೇರೇಪಿಸುತ್ತಾನೆ.
ಆದ್ದರಿಂದ ಸತ್ಯವಾಗಿರಲು ಪ್ರಯತ್ನಿಸಬೇಕು. ಕೆಟ್ಟದ್ದನ್ನು ಮಾಡಲು ಕೂಡ ನಿಮ್ಮ ಸುತ್ತಮುತ್ತಲಿನ ಜನ ನಿಮಗೆ ಹೆದರಬೇಕು ಅಷ್ಟೊಂದು ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಬೇಕು. ಸತ್ಯವಂತರ ಹತ್ತಿರ ಮಾತನಾಡಲೂ ಕೂಡ ಕೆಟ್ಟವರು ಹೆದರಿ ಬೆವರಿಳಿಸಿಕೊಳ್ಳುತ್ತಾರೆ.
ಇನ್ನು ಶನಿಮಹಾರಾಜನ ಕಾಡಾಟ ಎಲ್ಲರಿಗೂ ಬರಲೇಬೇಕು. ನಾವು ಆ ಜಾತಿ, ಈ ಜಾತಿ ನಮಗೆ ಶನಿದೇವನ ಕಾಡಾಟ ಬಂದರೂ ಏನೂ ಆಗಲ್ಲ ಎನ್ನುತ್ತಾರೆ ಕೆಲವರು. ಆದರೆ ಇಂಥವರಿಗೇನೆ ಶನಿದೇವನ ಕಾಡಾಟ ಜಾಸ್ತಿಯಾಗುತ್ತದೆ! ಆದ್ದರಿಂದ ಶನಿಕಾಡಾಟ ಯಾವಾಗಲಾದ್ರೂ ಬರಲಿ, ಎಲ್ಲರೂ ಶನಿರಾಜನ ಸಂಪ್ರೀತಿ ಮಾಡಿಕೊಳ್ಳಬೇಕು. ಶನಿಕಾಟದಿಂದ ಬೇಸತ್ತು ಆ ಸಮಯದಲ್ಲಿ ದೇವರ ಬಳಿ ಹೋಗುತ್ತಾರೆ.
ಈ ಹಿಂದಿನ ಲೇಖನಗಳಲ್ಲಿ ಶನಿದೇವನ ಕೃಪೆಗೆ ಎಂಬಲ್ಲಿ ಶನಿದೇವನ ಸಂಪ್ರೀತಿಗಾಗಿ ಕೆಲವೊಂದು ಮಾಹಿತಿ ನೀಡಲಾಗಿತ್ತು. ಎಲ್ಲವನ್ನೂ ಎಲ್ಲರೂ ಮಾಡಬೇಕಂತಿಲ್ಲ. ನಿಮಗೆ ಅನುಕೂಲ ಯಾವುದು ಆಗುತ್ತದೆಯೋ ಆ ಪರಿಹಾರ ಮಾಡಿಕೊಳ್ಳಬಹುದು. ಕಟ್ಟುನಿಟ್ಟಾಗಿ ಹೀಗೆ ಮಾಡಲೇಬೇಕು ಎಂದೇನೂ ಅಲ್ಲ. ಶನಿದೇವನ ಕೃಪೆ ಬೇಕೆಂದರೆ ಪರಿಹಾರ ಮಾಡಿಕೊಳ್ಳಬೇಕು.
ಸಾಡೇಸಾತಿಯಲ್ಲಿನ ರಾಶಿಗಳವರು ಮಹಾತ್ಮನ ಸಂಪ್ರೀತಿ ಮಾಡಿಕೊಳ್ಳಬೇಕು. ಏಕೆಂದರೆ ಶನಿ ಮಹಾತ್ಮನು ಮುಂದಿನ ದಿನಗಳಲ್ಲಿ ತನ್ನ ಶತ್ರು ರಾಶಿ ವೃಶ್ಚಿಕಕ್ಕೆ ಪ್ರವೇಶ ಮಾಡುತ್ತಾನೆ. ಆ ಸಮಯದಲ್ಲಿ ಮಹಾತ್ಮನು ಮತ್ತಷ್ಟು ಉಗ್ರನಾಗುತ್ತಾನೆ. ಕೆಲವರಿಗೆ ಶನಿದೇವನ ಕಾಡಾಟದ ಪರಿಹಾರ ಮಾಡಿಕೊಳ್ಳಲು ಕೂಡ ಹಣವಿರುವುದಿಲ್ಲ. ಹಣ ಇದ್ದಾಗ ದೇವರ ನೆನಪಿರುವುದಿಲ್ಲ. ದೇವರ ನೆನಪಾದಾಗ ಹಣವಿರುವುದಿಲ್ಲ! ಮೂರ್ಖರ ತರಹ ಶನಿದೇವನ ಪ್ರಭಾವವನ್ನು ಮೂಢನಂಬಿಕೆ ಎಂದುಕೊಂಡು ಕೆಟ್ಟದ್ದನ್ನು ಅನುಭವಿಸುತ್ತಾರೆ.
ಶನಿಮಹಾತ್ಮನ ಕಾಟದಲ್ಲಿ ಸುಲಭವಾಗಿ ಮಾಡಬಹುದಾದ ಪರಿಹಾರಗಳು ಇವು. ಶನಿಕಾಟದಿಂದ ಮುಕ್ತಿ ಬೇಕಾದಲ್ಲಿ ಈ ರೀತಿ ಮಾಡಿಕೊಳ್ಳಿ.
* ನವರತ್ನದ ಉಂಗುರ : ಇದು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತೆ. ಜಾತಕಕ್ಕೆ ಅನುಗುಣವಾಗಿ ಬಲಗೈ ತೋರು ಬೆರಳು ಅಥವಾ ಉಂಗುರು ಬೆರಳಿಗೆ ಈ ಉಂಗುರ ಧರಿಸಿಕೊಳ್ಳಬೇಕು.
* ನವಗ್ರಹ ಯಂತ್ರ : ಇದನ್ನು ಮನೆಯಲ್ಲಿ ಸ್ಥಾಪನೆ ಮಾಡಬೇಕು. ಹತ್ತಿರದಲ್ಲಿಯೂ ಕೂಡ ಇದನ್ನು ಇಟ್ಟುಕೊಳ್ಳಬೇಕು. ನವರತ್ನದ ಉಂಗುರ ಹಾಗೂ ನವಗ್ರಹ ಹೋಮ ಮಾಡಿಸಲಾಗದವರು ಇದಕ್ಕೆ ಮೊರೆ ಹೋಗಬಹುದು.
* ಶನಿಯಂತ್ರ : ಇದನ್ನು ಮನೆಯಲ್ಲಿ ಸ್ಥಾಪನೆ ಮಾಡಬಹುದು. ಇದನ್ನು ಶನಿವಾರ ಮಾತ್ರ ಪೂಜಿಸಬೇಕು. ಉಳಿದ ದಿನಗಳಲ್ಲಿ ದೇವರ ಜಗಲಿ ಮೇಲೆ ಇಡಬೇಕು.
* ಶನಿಪತ್ನಿಯರ ಸ್ತುತಿ ಪಠಿಸಬೇಕು.
* ಶನಿವಾರ ಹಾಗೂ ಅಮವಾಸ್ಯೆಯಂದು ಮದ್ಯ, ಮಾಂಸ ಸೇವಿಸಬಾರದು.
* ಶನೈಶ್ಚರ ಸ್ತ್ರೋತ್ರವನ್ನು ಪಠಿಸಬೇಕು.
* ಹನುಮಾನ ಚಾಲೀಸಾ ಪಠಣ ಮಾಡಬೇಕು. ಕುಟುಂಬದವರಿಗೆ ಹಾಗೂ ಸ್ನೇಹಿತರೆಲ್ಲರಿಗೂ ಕೂಡ ಈ ಬಗ್ಗೆ ತಿಳಿಸಬೇಕು.
* ನಿಮ್ಮ ಪರಿಚಿತರಿಗೆ ಶನಿದೇವನ ಕಾಡಾಟದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಬೇಕು.
* ದೇಹದ ರುಚಿ ನೋಡಲು ಮತ್ತೊಬ್ಬರ ಸಂಗ ಮಾಡಬಾರದು.
* ಶನಿವಾರದಂದು ಕಪ್ಪಗಿನ, ನೀಲಿ ಬಣ್ಣದ ಬಟ್ಟೆ ಧರಿಸುವುದು ಬೇಡ.
* ಹೆಂಗಸರಿಗೆ ಯಾವುದೇ ರೀತಿಯಲ್ಲೂ ತೊಂದರೆ ನೀಡಬಾರದು.
* ಶನಿಕಾಟದಲ್ಲಿ ಸಂಸಾರಿಗಳು ದಾಂಪತ್ಯ ನಿಲ್ಲಿಸಬಾರದು. ಕೆಲವರು ಶನಿಕಾಟದಲ್ಲಿ ಸಂಸಾರ ಮಾಡಬಾರದು ಎಂದು ತಿಳಿದುಕೊಂಡಿದ್ದಾರೆ!
* ಶನಿಕವಚ ಶನಿವಾರದಂದು ಧರಿಸಬೇಕು.
* ಶನಿವಾರ ಎಳ್ಳೆಣ್ಣೆ ಬತ್ತಿ ಶನಿ, ಹನುಮನ ಮಂದಿರಗಳಲ್ಲಿ ಹಚ್ಚಬೇಕು.
* ಮೃತ್ಯುಂಜಯ ಮಹಾಮಂತ್ರ ಜಪಿಸಬೇಕು.
* ಬನ್ನಿ ಗಿಡದಲ್ಲಿ ಶನಿಮಹಾರಾಜನು ರಾತ್ರಿ ವಾಸ ಮಾಡುತ್ತಾನೆ ಎಂಬ ಪ್ರತೀತಿ ಇರುವುದರಿಂದ ಬನ್ನಿ ಗಿಡಕ್ಕೆ ಪೂಜಿಸಬೇಕು.
* ಅರಳಿ ಮರವನ್ನು ಕೂಡ ಪೂಜಿಸಬಹುದು. (ಕೆಲ ಮೂರ್ಖರು ಗಿಡಗಳಿಗೇಕೆ ಪೂಜಿಸುತ್ತೀರಿ ಅದರಲ್ಲೇನು ದೇವರಿರುತ್ತಾನೆಯೇ? ಎನ್ನುತ್ತಾರೆ. ಆದರೆ ಗಿಡಗಳಿಂದ ಬರುವ ಆಕ್ಸಿಜನ್ನಿಂದಲೇ ತಾನು ಜೀವಂತವಿದ್ದೇನೆ ಎನ್ನುವ ಪರಿಜ್ಞಾನ ಇರುವುದಿಲ್ಲ ಆ ಶತಮೂರ್ಖರಿಗೆ.)
* ಶನೀಶ್ವರ ಜಯಂತಿಯಂದು ಶನಿದೇವರಿಗೆ ಎಳ್ಳೆಣ್ಣೆ ಅಭಿಷೇಕ ಮಾಡಿಸಬೇಕು.
* ಮಹಾಶಿವನಿಗೆ ಮಹಾರುದ್ರಾಭಿಷೇಕ ಮನೆಯಲ್ಲಿ ಮಾಡಿಸಬೇಕು.
* ಶ್ರೀ ಶನೈಶ್ಚರ ಮಹಾ ಯಂತ್ರ ಪೂಜಿಸಬೇಕು.
* ನವಗ್ರಹ ಸ್ತೋತ್ರ ಪಠಿಸಬೇಕು.
ಇವು ಕೆಲವೇ ಕೆಲವು ಪರಿಹಾರಗಳು. ಇನ್ನಷ್ಟು ಸುಲಭದ ಪರಿಹಾರಗಳನ್ನು ಮುಂದೆ ತಿಳಿಸಲಾಗುವುದು. ಎಲ್ಲ ಪರಿಹಾರಗಳನ್ನು ಮಾಡಬೇಕಂತಿಲ್ಲ. ನಿಮಗೆ ಅನುಕೂಲ ಯಾವುದು ಆಗುತ್ತದೆಯೋ ಅದನ್ನು ಮಾಡಬೇಕು.
"ಶನಿರಾಜನನ್ನು ಪೂಜಿಸುವುದು ಹೀಗೆ" ಎಂಬುದು ಮುಂದಿನ ಲೇಖನದಲ್ಲಿ. (ಒನ್ಇಂಡಿಯಾ ಕನ್ನಡ)
ವಾಸ್ತು ಟಿಪ್ಸ್ : ಮನೆ ಮುಂಬಾಗಿಲಿನ ಅಕ್ಕಪಕ್ಕದಲ್ಲಿ ಕುಂಕುಮದಿಂದ ಸ್ವಸ್ತಿಕ್, ತ್ರಿಶೂಲ, ಓಂ ಬರೆಯಬೇಕು.
ಶನಿದೇವನ ಕೃಪೆಗೆ : 30-11-2013ರಂದು ಶನಿಪ್ರದೋಷವಿದೆ. ಅಂದು ಸಂಜೆ ಮಹಾಶಿವನ ದರ್ಶನ ಮಾಡಬೇಕು.
ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)