ಜ್ಯೋತಿಷ್ಯ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜಾತಕ ಏನು ಹೇಳುತ್ತದೆ?
ಇಂದಿನ ಲೇಖನದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜಾತಕ ಪರಾಮರ್ಶೆ ಮಾಡಿರುವ ಪಂಡಿತ್ ವಿಠ್ಠಲ್ ಭಟ್ ಅವರು ಭವಿಷ್ಯದ ಬಗ್ಗೆ ತಿಳಿಸಿದ್ದಾರೆ
ದೆಹಲಿಯ ವಿಧಾನಸಭೆ ಚುನಾವಣೆ ಫಲಿತಾಂಶ ಬಂದ ದಿನ ಹೀರೋನಂತೆ ಕಂಡಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರ ಪಕ್ಷ ನಗರ ಪಾಲಿಕೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದೆ. ಈ ದಿನ ಅರವಿಂದ್ ಕೇಜ್ರಿವಾಲ್ ರ ಜಾತಕ ಪರಾಮರ್ಶೆ ಮಾಡಲಾಗಿದೆ. ತುಂಬ ಆಸಕ್ತಿಕರ ಮಾಹಿತಿಯನ್ನು ತಿಳಿಸಲಾಗುತ್ತಿದೆ.
ಕೇಜ್ರಿವಾಲ್ ಜನಿಸಿದ್ದು ಹರಿಯಾಣ ರಾಜ್ಯದ ಉತ್ತರ ಭಾಗದಲ್ಲಿ ಇರುವ ಭಿವಾನಿ ಜಿಲ್ಲೆಯ ಸಿವಾನಿ ಎಂಬಲ್ಲಿ. ಜನ್ಮ ದಿನಾಂಕ 16 ಆಗಸ್ಟ್, 1968. ಅವರದು ಕೃತ್ತಿಕಾ ನಕ್ಷತ್ರ, ವೃಷಭ ರಾಶಿ ಆಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭರಣಿ ಹಾಗೂ ಕೃತ್ತಿಕಾ ನಕ್ಷತ್ರಗಳೆರಡೂ ಅಗ್ನಿ ನಕ್ಷತ್ರಗಳು. ಅಂದರೆ ಬೆಂಕಿಯ ನಕ್ಷತ್ರಗಳು. ಆದ ಕಾರಣ ಆ ನಕ್ಷತ್ರದಲ್ಲಿ ಜನಿಸಿದ ಅರವಿಂದರೂ ಅವಶ್ಯಕ್ಕಿಂತಲೂ ಹೆಚ್ಚು ಸಿಟ್ಟು ಮಾಡುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ![ಮೇಷದಿಂದ ಮೀನ : ದ್ವಾದಶ ರಾಶಿಗಳ ಕ್ರಿಮಿನಲ್ ಜಾತಕ]
ಅವರು ಈಗ ಇರುವ ಸ್ಥಾನದಲ್ಲಿ ಹಾಗೆ ಸ್ವಲ್ಪ ಸಿಟ್ಟು ಮಾಡುವುದು ಅನಿವಾರ್ಯ ಎಂದು ನೀವು ಹೇಳಬಹುದು. ಆದರೆ ಇಲ್ಲಿ ಸಮಸ್ಯೆ ಬೇರೆನೇ ಇದೆ. ಅವರ ಜಾತಕದ ಪ್ರಕಾರ ಅವರು ಎಲ್ಲೆಡೆ ಸಿಟ್ಟು ಪ್ರದರ್ಶನ ಮಾಡುತ್ತಾರೆ. ಅಂದರೆ ಎಲ್ಲಿ ಮಾಡಬಾರದೋ ಅಲ್ಲಿಯೂ ತನ್ನ ಕೋಪವನ್ನು ಅತೀ ವಿಚಿತ್ರ ವಿಧಾನದಲ್ಲಿ ಪ್ರಸ್ತುತಪಡಿಸುತ್ತಾರೆ.
ಇನ್ನು ಅವರು ಹುಟ್ಟಿದ ದಿನವೇ ಮಾಸ ಸಂಕ್ರಾಂತಿ ಇತ್ತು. ಅಂದರೆ ರವಿ ಗ್ರಹ ಕರ್ಕಾಟಕ ರಾಶಿಯಿಂದ ತನ್ನ ಸ್ವಂತ ರಾಶಿಯಾದ ಸಿಂಹ ರಾಶಿಗೆ ಹೋದ ದಿನ. ಆದುದರಿಂದ ರವಿ ಗ್ರಹ ತನ್ನ ಸ್ವಸ್ಥಾನದ ಪ್ರಭಾವವನ್ನು ಅವರಿಗೆ ರಾಜಕೀಯದಲ್ಲಿ ಯಶಸ್ಸುನ್ನು ಅಧಿಕಾರದ ಸ್ವರೂಪದಲ್ಲಿ ನೀಡಿದೆ. ಇನ್ನು ಅವರಿಗೆ ಶಾಪವಾಗಿರುವುದು ಶನಿ ನೀಚ ಸ್ಥಿತಿ ಹಾಗೂ ಕಾಳಸರ್ಪ ಯೋಗ.[ದ್ವಾದಶ ರಾಶಿಗಳ ಮೇಲೆ ವಕ್ರೀ ಶನಿಯ ಪರಿಣಾಮ ಏನು?]
ಏನನ್ನೂ ಅನುಭವಿಸಲು ಬಿಡದ ನೀಚ ಶನಿ
ಅರವಿಂದ ಕೇಜ್ರಿವಾಲ್ ಅವರ ಜಾತಕದಲ್ಲಿ ಅತ್ಯಂತ ಮುಖ್ಯವಾದ ಸಮಸ್ಯೆ ಅಂದರೆ ಶನಿ ಗ್ರಹ ಮೇಷ ರಾಶಿಯಲ್ಲಿ ಇರುವುದು. ಅಂದರೆ ನೀಚ ಸ್ಥಿತಿಯಲ್ಲಿ ಶಕ್ತಿಹೀನ ಆಗಿರುವುದು. ಹಲವು ಕಾರಣಗಳಿಂದ ಇದು ಬಹಳ ಅಪಾಯಕಾರಿ ಗ್ರಹಸ್ಥಿತಿ. ಶನಿಗ್ರಹ ಮನುಷ್ಯನಿಗೆ ಅನುಭವಿಸುವ ಯೋಗವನ್ನು ನೀಡುತ್ತಾನೆ. ಅಂದರೆ ಶನಿ ಜಾತಕದಲ್ಲಿ ಉತ್ತಮ ಸ್ಥಿತಿಯಲ್ಲಿ ಇದ್ದರೆ ಸುಖವನ್ನು- ಸೌಖ್ಯವನ್ನು, ಕೀರ್ತಿ, ಪ್ರತಿಷ್ಠೆಗಳನ್ನು ಪ್ರಮುಖವಾಗಿ ಸೌಕರ್ಯಗಳನ್ನು ಅನುಭವಿಸುತ್ತಾರೆ. ಅದೇ ಶನಿ ಜಾತಕದಲ್ಲಿ ನೀಚ ಸ್ಥಿತಿಯಲ್ಲಿ ಇದ್ದರೆ ಎಲ್ಲ ಇದ್ದೂ ಯಾವುದನ್ನೂ ಪೂರ್ಣವಾಗಿ ಅನುಭವಿಸಲು ಆಗದ ಹಾಗೆ ಮಾಡುತ್ತಾನೆ.
ಅತಿಯಾಗಿ ಆಕರ್ಷಿಸುವ ಧರಣಿ
ಅರವಿಂದ ಕೇಜ್ರಿವಾಲ್ ಜೀವನವನ್ನು ನಾವು ನೋಡುತ್ತ ಸಾಗಿದರೆ ಅವರು ಎಲ್ಲ ಇದ್ದೂ ಏನನ್ನೂ ಅನುಭವಿಸಲು ಆಗಲಿಲ್ಲ. ಮುಖ್ಯಮಂತ್ರಿ ಆದರೂ ತಮ್ಮ ಹಳೇ ವ್ಯಾಗನ್ -ಆರ್ ಕಾರು ಬಿಡಲಾಗಲಿಲ್ಲ. ಏನೇ ಕಾರಣಗಳನ್ನು ನೀಡಿದರೂ ತಾನು ಉಳಿದುಕೊಳ್ಳುವ ಫ್ಲ್ಯಾಟನ್ನು ಬಿಟ್ಟು ದೊಡ್ಡ ಐಷಾರಾಮಿ ಮನೆಗೆ ಹೋಗಿ ಟೀಕೆಗೆ ಗುರಿ ಆಗಿ ಒದ್ದಾಡಿದರು. ಮುಖ್ಯಮಂತ್ರಿ ಆಗಿದ್ದರೂ ಪ್ರತಿ ದಿನ ಹಾಕುವ ವಸ್ತ್ರ ಹಾಗೂ ಚಪ್ಪಲಿ ಬದಲಾಗಲಿಲ್ಲ. ಅಧಿಕಾರದಲ್ಲಿ ಇದ್ದರೂ ರಸ್ತೆ ಬದಿಯ ಧರಣಿಗಳು ಇಂದಿಗೂ ಅವರನ್ನು ಅತಿಯಾಗಿ ಆಕರ್ಷಿಸುತ್ತದೆ. ಇವೆಲ್ಲಕ್ಕೂ ಕಾರಣ ಅರವಿಂದ ಕೇಜ್ರಿವಾಲ್ ಜಾತಕದಲ್ಲಿನ ಶನಿ ನೀಚ ಸ್ಥಿತಿ ಕಾರಣ.
ಅಷ್ಟಮ ಶನಿಯ ತೊಂದರೆ
ಯಾವುದೇ ಸೌಕರ್ಯ ಅನುಭವಿಸುವ ಯೋಗ ಅವರಿಗಿಲ್ಲ. ಈ ಶನಿ ನೀಚ ಸ್ಥಿತಿಯ ಮತ್ತೊಂದು ದೊಡ್ಡ ಸಮಸ್ಯೆ ಎಂದರೆ ಆಯುಷ್ಯ ಕಾರಕನಾದ ಆತ ಅದಕ್ಕೆ ಸಂಬಂಧಿಸಿದ ಸಮಸ್ಯೆ ಎದುರಾಗುತ್ತದೆ. ವೃಷಭ ರಾಶಿಯವರಾದ ಅವರಿಗೆ ಸದ್ಯ ಅಷ್ಟಮ ಶನಿ ನಡೀತಾ ಇದೆ. ಅಷ್ಟಮೇ ಮೃತ್ಯುದಾಯಕಃ ಎಂದು ಶನಿ ಗ್ರಹದ ಸ್ಥಾನದ ವಿಚಾರದಲ್ಲಿ ತಿಳಿಸುತ್ತಾರೆ. ಅಂದರೆ ಎಂಟನೇ ಮನೆಯಲ್ಲಿ ಶನಿ ಗ್ರಹ ಮೃತ್ಯುವನ್ನು ನೀಡುತ್ತಾನೆ ಎಂದರ್ಥ.
ರಕ್ಷಣೆಗೆ ಗಮನ ನೀಡಬೇಕು
ಅರವಿಂದ ಕೇಜ್ರಿವಾಲರ ಜಾತಕದಲ್ಲಿ ಆಯುಷ್ಯ ಕಾರಕ ಶನಿ ನೀಚ ಸ್ಥಿಯಲ್ಲಿ ಬಲಹೀನನಾಗಿದ್ದಾನೆ. ಒಂದು ಕಡೆ ಅಷ್ಟಮ ಶನಿ, ಇನ್ನೊಂದೆಡೆ ಜಾತಕದಲ್ಲಿ ಆಯುಷ್ಯಕಾರಕ ಬಲಹೀನ ಆದುದರಿಂದ ಅರವಿಂದ ಕೇಜ್ರಿವಾಲರು ಇನ್ನೂ ಕೆಲ ಕಾಲ ಅಂದರೆ 2020ರ ಜನವರಿ ತನಕ ಬಹಳ ಎಚ್ಚರಿಕೆ ಅವಶ್ಯ.
ಇನ್ನು ಅಷ್ಟಮ ಶನಿ ಕೇವಲ ಸಾವನ್ನು ಮಾತ್ರ ಕೊಡುತ್ತಾನೆ ಎಂಬರ್ಥವನ್ನು ನಾವು ಪೂರ್ಣವಾಗಿ ತೆಗೆದುಕೊಳ್ಳಲು ಸಹ ಆಗದು. ಆದರೆ ಸಾವನ್ನು ಮೀರಿಸುವಂಥ ಅವಮಾನಗಳು ಅಥವಾ ಕಷ್ಟಗಳು ಈ ಸಮಯದಲ್ಲಿ ಅವರಿಗಿದೆ ಎಂದು ತಿಳಿಯಬಹುದು. ಆದುದರಿಂದ ಈ ಸಮಯದಲ್ಲಿ ಅರವಿಂದ ಕೇಜ್ರಿವಾಲ್ ಅವರು ಉಗ್ರವಾದಿಗಳು ಅಥವಾ ಅಂಥ ಸಂಘಟನೆಗಳಿಂದ ಎಚ್ಚರವಾಗಿರಬೇಕು. ತಮ್ಮ ರಕ್ಷಣೆ ಕುರಿತು ಹೆಚ್ಚು ಗಮನ ನೀಡಬೇಕು.
ಅಷ್ಟಮ ಶನಿ ಹಾಗೂ ಷಷ್ಠ ಗುರು
2017ರ ಸೆಪ್ಟೆಂಬರ್ ತನಕ ಗುರುವು ಪಂಚಮದಲ್ಲಿ ಇರುವುದರಿಂದ ಆ ಪ್ರಮಾಣದಲ್ಲಿ ಸಮಸ್ಯೆಯಾಗುವುದಿಲ್ಲ. ಆದರೆ ಗುರು ಸಹ ಆರನೇ ಸ್ಥಾನಕ್ಕೆ ಬಂದ ಮೇಲೆ ಅದರ ಪ್ರಭಾವ ಗೊತ್ತಾಗುತ್ತದೆ. ಅದರಲ್ಲೂ ಮುಖ್ಯವಾಗಿ ಆರೋಗ್ಯ ಸಮಸ್ಯೆ ಉಲ್ಬಣಿಸುತ್ತದೆ. ಆಸ್ಪತ್ರೆ ವಾಸ ಅನುಭವಿಸಬೇಕಾಗುತ್ತದೆ. ಅಷ್ಟಮ ಶನಿ ಹಾಗೂ ಷಷ್ಠ ಗುರುವಿನ ಪರಿಣಾಮ ಆಗುತ್ತದೆ.
ಕಾಳ ಸರ್ಪ ಯೋಗ
ಇನ್ನು ಅರವಿಂದ ಕೇಜ್ರಿವಾಲರಿಗೆ ಬೆಂಬಿಡದ ಭೂತವಾಗಿ ಕಾಡಿ ಅವರ ಸೋಲುಗಳಿಗೆ ಪ್ರಧಾನ ಕಾರಣ ಆಗುವುದು ಈ ಕಾಳ ಸರ್ಪ ದೋಷ! ಈ ದೋಷ ಇದ್ದವರು ಏನನ್ನೂ ಸಹ ಸಂಪೂರ್ಣವಾಗಿ ಪಡೆಯಲಾರರು. ವಿದ್ಯೆ, ವಿವಾಹ, ಸಂತಾನ. ಜೀವನ ನಿರ್ವಹಣೆ ಈ ಎಲ್ಲ ವಿಚಾರಗಳಲ್ಲಿ ಒಂದು ಅಪೂರ್ಣತೆ ಸದಾ ಕಾಡುತ್ತದೆ. ದೆಹಲಿಯಲ್ಲಿ ಮೊದಲ ಸಲ ಚುನಾವಣೆ ಗೆದ್ದಾಗಲೂ ಪೂರ್ಣವಾಗಿ ಗೆಲ್ಲಲು ಅವರಿಂದ ಆಗಲಿಲ್ಲ. ಮತ್ತೆ ಪ್ರಯತ್ನಿಸ ಬೇಕಾಗಿ ಬಂತು.
ದುಡುಕು ಹಾಗೂ ಹಟ ಸ್ವಭಾವ
ಹಾಗೆಯೇ ಈ ಕಾಳ ಸರ್ಪ ದೋಷದಿಂದಾಗಿ ಅರವಿಂದರಲ್ಲಿ ದುಡುಕಿನ ಸ್ವಭಾವ, ಆತುರದ ನಿರ್ಧಾರಗಳು ಹೆಚ್ಚಾಗುತ್ತವೆ. ಇವರ ಜಾತಕದ ದೊಡ್ಡ ಸಮಸ್ಯೆ ಅಂದರೆ ತಾನು ಹಿಡಿದ ಮಂಚಕ್ಕೆ ಮೂರೇ ಕಾಲು ಎಂಬಂಥ ಬುದ್ದಿ! ಹೌದು, ತಾನು ಏನು ನಂಬಿದ್ದೇನೋ ಅದುವೇ ಸತ್ಯ ಎಂದು ತಿಳಿಯುವುದು ಹಾಗೂ ಇತರರ ಮೇಲೆ ಅದನ್ನು ಹೇರುವುದು ಇದು ಈ ಜಾತಕದ ದೊಡ್ಡ ಸಮಸ್ಯೆ. ಅದರಿಂದಾಗಿ ಅವರ ಬಳಿ ಉದ್ಯೋಗ ಮಾಡುವ ಎಷ್ಟೋ ಜನರಿಗೆ ಬಹಳ ಸಮಸ್ಯೆ ಆಗಿರುತ್ತದೆ.
ದುರುಪಯೋಗ ಸಾಧ್ಯ
ಅರವಿಂದರ ಈ ಜಾತಕದ ಪ್ರಕಾರ ಕೆಟ್ಟ ವ್ಯಕ್ತಿ ಎಂದು ಹೇಳಲು ಅಸಾಧ್ಯ. ಹಾಗೇ ಉತ್ತಮ ಪುರುಷ ಎಂದು ಸಾರಲು ಅಸಾಧ್ಯ. ಆದರೆ ಅವರ ಈ ಕಾಳಸರ್ಪ ದೋಷ ಹಾಗೂ ನೀಚ ಶನಿಯ ಸ್ಥಾನ ಹಾಗೂ ಸಿಂಹ ರಾಶಿಯಲ್ಲಿ ಅಸ್ತನಾಗಿರುವ ಗುರು ಗ್ರಹ ಇತ್ಯಾದಿಗಳಿಂದಾಗಿ ಅರವಿಂದರನ್ನು ಅತ್ಯಂತ ಸುಲಭವಾಗಿ ದುರುಪಯೋಗ ಪಡಿಸಿಕೊಳ್ಳಬಹುದು ಎಂದರೆ ನೀವು ನಂಬಲೇ ಬೇಕು.
ಅರವಿಂದರ ಜಾತಕದ ಪ್ರಕಾರ ಅವರ ಮುಂದಿನ ದಿನಗಳು ಅಷ್ಟು ಸುಲಭವಾಗಿ ಕಾಣುತ್ತಿಲ್ಲ. ಅತ್ಯಂತ ಎಚ್ಚರ ಆವಶ್ಯ.
ಆಚಾರ್ಯ ವಿಠ್ಠಲ ಭಟ್ ಕೆಕ್ಕಾರ್ -ಮೊ 985682380.