ಹುಲುಮಾನವನಿಗೆ ಶನಿಯಿಂದ ಬರುವ ರೋಗ ಹಲವಾರು
ಶನಿಪ್ರಭಾವದ ಬಗ್ಗೆ ತಿಳಿದುಕೊಂಡವರಿಗೆ ಅವನಿಂದ ಬರುವ ಕೆಲವೊಂದು ರೋಗಗಳ ಮಾಹಿತಿಯೂ ಕೂಡ ಇರುವುದು ಒಳ್ಳೆಯದು ಅಂತಾರೆ ಸಾಮೇರು. ಏಕೆಂದರೆ, ಶನಿದೇವ ಕೊಡುವ ಶಿಕ್ಷೆ ಕಣ್ಣಿಗೆ ಕಾಣಲ್ಲ, ಆದರೂ ಯಮಯಾತನೆಯಂತಹ ನೋವು ಅನುಭವಿಸಬೇಕಾಗುತ್ತದೆ ಶನಿಪ್ರಭಾವಕ್ಕೊಳಗಾದ ಹುಲುಮಾನವರು.
ಅವನು ನೋವು ನೀಡುವುದು ಜನ್ಮರಾಶಿಯಿಂದ ಅಷ್ಟಮ ಸ್ಥಾನಕ್ಕೆ ಬಂದಾಗ ಮಾತ್ರ. ಉಳಿದಂತೆ ಪಂಚಮ ಸ್ಥಾನಕ್ಕೆ ಬಂದಾಗ ಸಂಸಾರಕ್ಕೆ ಪೆಟ್ಟು ಕೊಡುವುದು ಜನಜನಿತವಾದ ವಿಷಯವಾಗಿದೆ. ಇನ್ನು ಸಾಡೇಸಾತಿ ಶನಿಕಾಟದಲ್ಲಿ ವ್ಯಕ್ತಿಯ ಹಿಂದಿನ ಕರ್ಮಾದಿ ಫಲಗಳನ್ನು ನೋಡಿಕೊಂಡು ಒಮ್ಮಿಂದೊಮ್ಮೆಲೆ ಹೀರೋ ಮಾಡುತ್ತಾನೆ, ಹೀರೋ ಇದ್ದವನನ್ನು ಒಮ್ಮಿಂದೊಮ್ಮೆಲೆ ಝೀರೋ ಮಾಡಿ ನೆಲಕ್ಕೊರೆಗಿಸುತ್ತಾನೆ.
ಸಾಮಾನ್ಯವಾಗಿ ವ್ಯಕ್ತಿಗಳನ್ನು ಹೀರೋ ಮತ್ತು ಝೀರೋ ಮಾಡುವವರು ಜನರೇ. ಆದರೆ ಜನರಿಂದ ಮಾಡಿಸುವುದು ಮಾತ್ರ ಮಹಾಮಹಿಮ ಶನಿದೇವ! ಇನ್ನು ಕೆಲವರು ನೆಪ ಮಾತ್ರಕ್ಕೆ ಕೆಲವೊಂದು ಕಟ್ಟುಪಾಡುಗಳನ್ನು ಮಾಡುತ್ತಿರುತ್ತಾರೆ. ಶ್ರಾವಣದಲ್ಲಿ ದೇವರ ಬಗ್ಗೆ ಅಪಾರ ಭಕ್ತಿ ತೋರಿಸುತ್ತಾರೆ. ಶ್ರಾವಣ ಮುಗಿದ ನಂತರ ರಾವಣರಾಗುತ್ತಾರೆ. ಇದನ್ನೇ ಶನಿದೇವ ನೋಡುತ್ತಿರುತ್ತಾನೆ. ಏಕೆಂದರೆ ಇದು ಕಲಿಯುಗ ಅಂದರೆ ಕಲಿಯುವ ಯುಗ ಎಂಬುದು ತಿಳಿದುಕೊಳ್ಳಿ. ಇಲ್ಲಾಂದ್ರೆ ಶನಿದೇವ ತಿಳಿಸಿಕೊಡುತ್ತಾನೆ ಸೈಲೆಂಟ್ ಕಿಲ್ಲರ್ ಆಗಿ. [ಯಾವ ರೋಗಗಳಿಗೆ ಯಾವ ಯೋಗಾಸನ ಉಪಯುಕ್ತ]
ಇನ್ನು ಕೆಲವೊಂದು ಪ್ರದೇಶಗಳಿಗೆ 52 ಎಲೆ ಊರು ಎಂದು ಕರೆಯುತ್ತಿರುತ್ತಾರೆ. ಅಂತಹ ಪ್ರದೇಶಗಳಿಗೆ ಅಪ್ಪಿತಪ್ಪಿಯೂ ಹೋಗಿ ಕುಳಿತುಕೊಂಡು ಪಣದಾಟವಾಡಬೇಡಿ. ಅದನ್ನೂ ಗಮನಿಸುತ್ತಿರುತ್ತಾರೆ ಮಹಾಮಹಿಮ ಶನಿ. ಗೊತ್ತಾಗಿರಬೇಕಲ್ಲ 52 ಎಲೆ ಊರು ಎಂದರೆ. ಆಡುವವರಿಗೆ ಗೊತ್ತಾದರೆ ಸಾಕು. ಇಲ್ಲಾಂದ್ರೆ ಹಿಂದೇನೆ ಜನಾ ನಿಂತಿರ್ತಾರೆ ಯಾವಾಗ ಇವನ ಫೋಟೋಗೆ ಮಾಲೆ ಹಾಕ್ತಾರಪ್ಪಾ ಎಂದು ಯೋಚಿಸುತ್ತ.
ಇರಲಿ, ಈಗ ಶನಿಯಿಂದ ಬರುವ ಕೆಲವೊಂದು ರೋಗರುಜಿನಗಳನ್ನು ಗಮನಿಸೋಣ. ಬೇಕಾದವರು ರೋಗ ಬಂದವರನ್ನು ಕೇಳಿ ಹೇಗೆ ಬಂತು ಎಂದು, ಅವ್ರೇ ಬಾಯ್ ಬಿಡ್ತಾರೆ. ಸಾಡೇಸಾತಿಯ ಮೊದಲ ಹಂತದಲ್ಲಿ ತಲೆಗೆ ಸಂಬಂಧಪಟ್ಟ, ಎರಡನೇ ಹಂತದಲ್ಲಿ ಎದೆ, ಹೊಟ್ಟೆ, ಕಿಡ್ನಿಗೆ ಸಂಬಂಧಪಟ್ಟ ಮತ್ತು ಮೂರನೇ ಹಂತದಲ್ಲಿ ಕಾಲಿಗೆ ಸಂಬಂಧಪಟ್ಟ ತೊಂದರೆಗಳು ಬರುವುದೇ ಶನಿಪ್ರಭಾವದಿಂದ.
ಇನ್ನಷ್ಟು ವಿವರಿಸಿ ಹೇಳಬೇಕೆಂದರೆ, ಇವನಿಂದ ಹಲ್ಲುನೋವು, ಸ್ನಾಯು ಸೆಳೆತ, ಮಂಡಿನೋವು, ಕಾಲುನೋವು, ಕೀಲುನೋವು, ಕ್ಷಯರೋಗ, ಜಾಂಡೀಸ್, ಕಿಡ್ನಿಯಲ್ಲಿ ಕಲ್ಲು, ಗ್ಯಾಸಟ್ರಬಲ್, ನಪುಂಸಕತೆ, ಮೂಳೆ ಮುರಿತ, ಮಾನಸಿಕ ರೋಗ ಸೇರಿದಂತೆ ಅನೇಕ ರೋಗ ರುಜಿನಾದಿಗಳನ್ನು ಅನುಭವಿಸಬೇಕಾಗುತ್ತದೆ. ಅಲ್ರೀ ಸಾಮೇರ, ಡಾಕಟರು ರೋಗ ಚೆಕ್ ಮಾಡಾಕಿಲ್ವಾ, ಅವರೇನೂ ಹೇಳಾಕಿಲ್ಲಾ ಶನಿ ಬಗ್ಗೆ ಎಂದು ಕೇಳಿದರೆ, ಚಲ್ ಪುಟ್ ರೇ ಎಂದು ಗದರಿಸಬೇಕಾಗುತ್ತದೆ ಸಾಮೇರು. [ಸೂರ್ಯ ನಮಸ್ಕಾರ ಕ್ರಮಬದ್ಧವಾಗಿ ಮಾಡುವ ವಿಧಾನ]
ಶನಿಯ ಬಗ್ಗೆ ಮಹಾನ್ ಕವಿಗಳೇ ವರ್ಣಿಸಿದ್ದಾರೆ. ಖ್ಯಾತ ಕವಿ ಕಾಳಿದಾಸನೇ ಅವನನ್ನು ವರ್ಣನೆ ಮಾಡಿ ಬರೆದಿದ್ದಾನೆ. ಅಂದರೆ ಕಾಳಿದಾಸನ ಉಳಿದೆಲ್ಲ ಸಾಹಿತ್ಯಗಳು ಮಾತ್ರ ಸತ್ಯ. ಶನಿಯ ಬಗ್ಗೆ ಬರೆದಿದ್ದು ಸುಳ್ಳಾ? ಒಮ್ಮೆ ಯೋಚಿಸಿ ಉತ್ತರ ಕೊಡಿ ಬುದ್ಧಿವಂತರಾಗಿದ್ದರೆ.
ಏಕೆಂದರೆ ಶನಿಪ್ರಭಾವವಿದ್ದಾಗ ಕೆಟ್ಟವರ ಸಹವಾಸ ಮಾಡಿಸುತ್ತಾನೆ. ದುಶ್ಚಟಗಳ ದಾಸರನ್ನಾಗಿಸುತ್ತಾನೆ. ಇನ್ನು ಸಾವನ್ನು ಕೂಡ ಜಾತಕದಲ್ಲಿ ಶನಿಯ ಸ್ಥಾನದಿಂದಲೇ ಕಂಡು ಹಿಡಿಯಲಾಗುತ್ತದೆ. ಇವನ ಪ್ರಭಾವದಿಂದ ಹಲವರು ಮೂರ್ಖತನದಿಂದ ಕೆಟ್ಟ ಕೆಲಸ ಮಾಡಿ ಊಟಕ್ಕೆ ತಟ್ಟೆ ಹಿಡಿದುಕೊಂಡು ನಿಲ್ಲುವಂತಾಗುತ್ತದೆ.
ಇನ್ನು ಇವನು ಆಡಳಿತದಲ್ಲೂ ತನ್ನ ಪ್ರಭಾವ ಹೊಂದಿದ್ದಾನೆ. ಅಂದರೆ ನ್ಯಾಯಾಲಯ, ಪುರಾತತ್ವ ಇಲಾಖೆ, ಹಠಯೋಗ, ಸ್ನಾಯುಶಾಸ್ತ್ರ, ಗುಪ್ತಚರ ಇಲಾಖೆ ಸೇರಿದಂತೆ ಇತರೆ ಇಲಾಖೆಗಳಲ್ಲಿ ಶನಿಪ್ರಭಾವ ಎದ್ದು ಕಾಣಬಹುದು. ಸಾಮೇರ, ಅಂದ್ರೆ ಈ ಇಲಾಖೆಗಳಲ್ಲಿ ಇರುವವರೆಲ್ಲರೂ ಶನಿಗಳೇ ಎಂದು ಬುದ್ಧಿಗೇಡಿ ಪ್ರಶ್ನೆ ಕೇಳಬೇಡಿ ದಯಮಾಡಿ. ಈ ಇಲಾಖೆಗಳಲ್ಲಿ ತಪ್ಪಿಗೆ ಶಿಕ್ಷೆಯಾಗುವುದು ನಮ್ಮ ಸಂವಿಧಾನದ ಪ್ರಕಾರ. ಆದರೆ ಶಿಕ್ಷೆಗೆ ಹೆಚ್ಚು ಸಹಾಯ ಮಾಡುವವನು ನಮ್ಮ ಶನಿಯೇ.
ಆದರೆ, ನಮ್ಮ ಜಾತಕದಲ್ಲಿ ಶನಿಯ ಪ್ರಭಾವ ಹೇಗಿದೆ ಎಂದು ತಿಳಿದುಕೊಂಡಾಗ ಮಾತ್ರ ನಮಗೆಂಥ ಶಿಕ್ಷೆ ಕಾದಿದೆ ಎಂದು ಅರಿತುಕೊಳ್ಳಬಹುದು ನಾವು ಸಾಮೇರ ಕಡೆಯಿಂದ. ಈಗಿಷ್ಟು ಸಾಕು ಮತ್ತಷ್ಟು ಅವನ ಬಗ್ಗೆ ವಿವರಗಳನ್ನು ಸಾಮೇರ ಕೊಡ್ತಾರೆ ಆಮೇಲೆ. ಅಂದಂಗೆ ಶನಿಪ್ರಭಾವ ಅನುಭವಿಸಿದವರು ಒಂದಷ್ಟು ನುಡಿಮುತ್ತುಗಳನ್ನು ಅಕ್ಷರರೂಪದಲ್ಲಿ ಇಳಿಸಿ ಕೆಳಗೆ ಹಾಕಿ.