ಗುರುಬಲ ಕಳೆದುಕೊಂಡು ಹುಂಬರಂತಾದ ಕುಂಭ ರಾಶಿಯವರು
ಇಷ್ಟು ದಿನ 7ನೇ ಮನೆಯಲ್ಲಿದ್ದ ಗುರುವು ತನ್ನ ಬಲದಿಂದ ಸಾಕಷ್ಟು ಶುಭಫಲಗಳನ್ನು ನೀಡಿದ್ದ. ಈಗ ಗುರುಬಲ ಕಳೆದುಕೊಂಡಿರುವ ಕುಂಭ ರಾಶಿಯವರು ಸ್ವಲ್ಪ ಮಾನಸಿಕ ನೆಮ್ಮದಿ ಕಳೆದುಕೊಂಡು ಏನಿದು ನಮ್ಮ ಜೀವನ ಹುಂಬರಂತಾಯಿತಲ್ಲ ಎಂದು ಹಲಬುವಂತಾಗುತ್ತಾರೆ.
ಏಕೆಂದರೆ ಗುರುವು ಅಷ್ಟಮ ಶನಿಯಾಗಿ 8ನೇ ಮನೆಗೆ ಕಾಲಿಟ್ಟಿದ್ದಾನೆ. ಸಾಮಾನ್ಯವಾಗಿ ಅಷ್ಟೇನೂ ಶುಭಕರ ಸ್ಥಾನವಲ್ಲದ ಅಷ್ಟಮದಲ್ಲಿ ಗುರುವು ಸ್ವಲ್ಪ ಕಿರಿಕ್ ಮಾಡುವುದೇ ಜಾಸ್ತಿ. ಶನಿದೇವನು ಕೂಡ 10ನೇ ಸ್ಥಾನದಲ್ಲಿದ್ದು ಅವನೂ ಕೂಡ ಸಹಾಯ ಮಾಡುತ್ತಿಲ್ಲ. ರಾಶಿಯ ಅಧಿಪತಿ ಬೇರೆ ಅವನು, ಆದರೂ ಕಣ್ತೆರೆಯುತ್ತಿಲ್ಲವಲ್ಲ ಎಂದು ಕೆಲವರು ತಲೆ ಕೆರೆದುಕೊಳ್ಳುತ್ತಿರಬಹುದು. [ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]
ಗುರುಬಲದಿಂದ ಇಷ್ಟು ದಿನ ಜಗತ್ತನ್ನೇ ಗೆದ್ದವರಂತೆ ವರ್ತಿಸುತ್ತಿದ್ದ ಕುಂಭ ರಾಶಿಯವರು ಇನ್ಮುಂದೆ ಅಂದರೆ ಕನಿಷ್ಠ ಮುಂದಿನ ವರ್ಷದ ಜನವರಿ ತಿಂಗಳವರೆಗೆ ಸಮಾಧಾನ ಮತ್ತು ತಾಳ್ಮೆಯಿಂದ ಇರಲು ಕಲಿಯಬೇಕು. ಏಕೆಂದರೆ ಮುಂದಿನ ಜನವರಿಗೆ ಶನಿದೇವನು 11 ಸ್ಥಾನಕ್ಕೆ ಬಂದು ಇಡೀ ಜೀವನ ಪೂರ್ತಿ ಕುಳಿತುಕೊಂಡು ತಿನ್ನುವಷ್ಟು ಸಂಪಾದನೆ ಮಾಡುವುದನ್ನು ಕಲಿಸುತ್ತಾನೆ.
ಪರಿಸ್ಥಿತಿ ಹೀಗಿರಬೇಕಾದರೆ, ಕುಂಭ ರಾಶಿಯವರು, ಪುರುಷರಾಗಲಿ ಮಹಿಳೆಯರಾಗಲಿ ಜೀವನದಲ್ಲಿ ಹೇಗೆ ಇರಬೇಕು, ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬೇಕಾದರೆ ಏನೇನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ವಿವರಗಳು ಮುಂದಿವೆ. ಇವುಗಳನ್ನು ತಪ್ಪದೆ ಪಾಲಿಸಿ. [ಕುಂಭ ರಾಶಿ ಯುಗಾದಿ ವರ್ಷ ಭವಿಷ್ಯ ಮತ್ತು ಫಲಾಫಲ]
ಮಕ್ಕಳಿಗಾದರೆ ವಿದ್ಯೆ ಮತ್ತು ಬುದ್ಧಿಯಲ್ಲಿ ಹೆಚ್ಚಳ
ಮಕ್ಕಳಿಗಾದರೆ ವಿದ್ಯೆ ಮತ್ತು ಬುದ್ಧಿಯಲ್ಲಿ ಹೆಚ್ಚಳವಾಗುತ್ತದೆ. ವಯಸ್ಸಿನವರಾದರೆ ಹಣಕಾಸಿನ ಮತ್ತು ಆಸ್ತಿಪಾಸ್ತಿ ಖರೀದಿಸಲು ಅವಕಾಶಗಳು ಸಿಗುತ್ತವೆ. ಇನ್ನು ವಯಸ್ಸಾದವರಾದರೆ ಕುಟುಂಬದವರಿಂದ ಸಹಾಯಹಸ್ತ ಸಿಗುತ್ತದೆ.
ಊಟ ನಿದ್ದೆ ಬಿಟ್ಟು ಕೆಲಸ ಮಾಡಬೇಡಿ
ಹೆಂಗಸರಿಗೆ ಜೀವನ ನೆಮ್ಮದಿಯಲ್ಲಿ ಸಾಗುವಂಥ ಅವಕಾಶ ಮುಂದಿನ ಎರಡೂವರೆ ವರ್ಷವಿದೆ. ಆದರೆ ಜನವರಿಯ ನಂತರವೇ. ಆ ಸಮಯದಲ್ಲಿ ನೂರು ಕೆಲಸ ಬಿಟ್ಟು ಸ್ನಾನ ಮಾಡಬೇಕು, ಸಾವಿರ ಕೆಲಸ ಬಿಟ್ಟು ಊಟ ಮಾಡಬೇಕು ಎಂಬಂತೆ ಜೀವನ ಸಾಗಿಸಬೇಕು. ಏಕೆ ಈ ಮಾತು ಅಂದರೆ, ಶನಿಬಲ ಬಂದಿರುವಾಗ ಕಾಸು ದುಡಿಯಲು ಸಿಕ್ಕಾಪಟ್ಟೆ ಶ್ರಮ ಹಾಕಬೇಕಾಗುತ್ತದೆ. ಕೆಲವೊಬ್ಬರು ಊಟ, ನಿದ್ರೆಯಿಲ್ಲದೇ ಕೆಲಸ ಮಾಡುತ್ತಿರುತ್ತಾರೆ. ಹಾಗೆ ಮಾಡಬಾರದು ಎಂಬುದರ ಅರ್ಥವೇ ಮೇಲಿನ ಮಾತಿನದು.
ಅನವಶ್ಯಕ ಸಮಸ್ಯೆ ಹುಟ್ಟು ಹಾಕಿಕೊಳ್ಳಬೇಡಿ
ಮೊದಲೇ ಕಠಿಣ ಹೃದಯಗಳಾದ ಕುಂಭ ರಾಶಿಯವರು ಉಪ್ಪು ಕೇಳಿದರೆ ಉಪ್ಪಾ ಕೊಡುವವರನ್ನೂ ಸೇರಲ್ಲ. ಹೀಗಾಗಿ ಈಗ ಸಮಯ ಸರಿಯಿಲ್ಲವಾದ್ದರಿಂದ ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಿ. ಅನವಶ್ಯಕ ಸಮಸ್ಯೆಗಳನ್ನು ಹುಟ್ಟು ಹಾಕಿಕೊಳ್ಳಬೇಡಿ. ವಿವಾದವನ್ನು ಮೈಮೇಲೆ ಎಳೆದುಕೊಳ್ಳುವುದು ಸರ್ವಥಾ ನಿಷಿದ್ಧ. ಇದರಿಂದ ವ್ಯಕ್ತಿಗತವಾಗಿ ಹೊಡೆತ ಬೀಳುತ್ತದೆ.
ಮನಸ್ಸಿಗೆ ಹಿಡಿಸದ ಉದ್ಯೋಗ ಮಾಡಬೇಡಿ
ಕೆಲವೊಂದು ಬಾರಿ ಮನಸ್ಸಿಗೆ ಹಿಡಿಸದ ಉದ್ಯೋಗ ಮಾಡಬೇಕಾಗಿ ಬಂದರೆ ಅವುಗಳನ್ನು ಬಿಟ್ಟು ಬಿಡಿ. ನಿಮಗೆ ಯಾವುದು ಇಷ್ಟವೆನಿಸುತ್ತದೆಯೋ ಯಾವುದರಲ್ಲಿ ಆಸಕ್ತಿ ಇದೆಯೋ ಅದೇ ಕೆಲಸ ಮಾಡಿ. ವೇತನ ಕಡಿಮೆಯಾದರೂ ಚಿಂತೆಯಿಲ್ಲ ಮಾನಸಿಕ ನೆಮ್ಮದಿ ಮತ್ತು ಆತ್ಮಗೌರವ ಮುಖ್ಯ.
ನೀವೇ ನಿಮ್ಮನ್ನು ನಿಯಂತ್ರಿಸಿಕೊಳ್ಳಿ
ಕುಟುಂಬದವರೊಂದಿಗೆ ವಾಗ್ವಾದ ಮಾಡಲೇಬೇಡಿ. ಸಣ್ಣಪುಟ್ಟ ವಿಷಯಗಳಿಗೂ ಮನೆಮಂದಿಯೆಲ್ಲ ಕಚ್ಚಾಡುವಂತಹ ಪರಿಸ್ಥಿತಿ ಬಂದರೂ ಬರಬಹುದು. ಹೀಗಾಗಿ ನೀವೇ ನಿಮ್ಮನ್ನು ನಿಯಂತ್ರಿಸಿಕೊಳ್ಳಿ. ಕೆಲವೊಂದು ಬಾರಿ ಕೆಲಸದಲ್ಲಿ ಸಹೋದ್ಯೋಗಿಗಳು ಅಥವಾ ಹಿರಿಯ ಅಧಿಕಾರಿಗಳು ಕಿರಿಕ್ ಮಾಡುತ್ತಿದ್ದರೆ ಮುದ್ದಿನ ಮಗು ನಕ್ಕಂಗೆ ನಕ್ಕು ಸುಮ್ಮನಾಗಿ ಬಿಡಿ.
ಭೀತಿ ಬೇಡ, ಎಲ್ಲರೊಂದಿಗೆ ಪ್ರೀತಿ ಇರಲಿ
ಒಂದು ತಿರುಗು ಮಾತು ಕೂಡ ಪಿಂಕ್ ಸ್ಲಿಪ್ಸ್ ಬರಲು ಕಾರಣವಾಗಬಹುದು. ಆದ್ದರಿಂದ, ಎಲ್ಲರೊಂದಿಗೂ ಪ್ರೀತಿಯಿಂದ ಇರಲು ಆರಂಭಿಸಿದರೆ ಜೀವನ ಸ್ವರ್ಗವೆನಿಸಿಕೊಳ್ಳುತ್ತದೆ. ಹೆದರಿಕೆಯಿಂದ, ಭಯ, ಭೀತಿಯಿಂದ ಜೀವನ ಸಾಗಿಸುತ್ತಿದ್ದರೆ ಅದರಂತಹ ನರಕ ಮತ್ತೊಂದಿಲ್ಲ ಎನ್ನಬಹುದು.
ಹೆಣ್ಣಿನ ಭಾಷೆಯನ್ನು ಅರಿಯಲು ಪ್ರಯತ್ನಿಸಿಕೊಳ್ಳಿ
ಕೆಲವೊಂದು ಕುಂಭ ರಾಶಿಯ ಪುರುಷರಿಗೆ ಈ ಸಮಯದಲ್ಲಿ ಮಹಿಳೆಯರಿಂದ ತೊಂದರೆ ಬರಬಹುದು. ಆದ್ದರಿಂದ ಹೆಣ್ಣಿನ ಭಾಷೆಯನ್ನು ಅರಿಯಲು ಪ್ರಯತ್ನಿಸಿಕೊಳ್ಳಿ. ಅವರಿಗೆ ಅನುಗುಣವಾಗಿ ನಡೆದುಕೊಳ್ಳಿ. ಇದರಿಂದ ಮುಂಬರುವ ತೊಂದರೆಗಳಿಂದ ಪಾರಾಗಬಹುದು.
ಶತ್ರುಗಳೊಂದಿಗೆ ಕಾಂಪ್ರೊಮೈಸ್ ಮಾಡಿಕೊಳ್ಳಿ
ಶತ್ರುಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯಲಾರಂಭಿಸಿದರೆ ಕೂಡಲೇ ಎಲ್ಲರೊಂದಿಗೆ ಕಾಂಪ್ರೊಮೈಸ್ ಮಾಡಿಕೊಳ್ಳಿ. ಇಲ್ಲದಿದ್ದರೆ, ಆಮೇಲೆ ನೀವು ಭೂಮಿ ತಾಯಾಣೆ ನನ್ನಿಂದ ತಪ್ಪಾಗಿಲ್ಲ ಎಂದು ಕಾಡಿ ಬೇಡಿಕೊಂಡರೂ ಶತ್ರುಗಳು ನಿಮ್ಮನ್ನು ತುಳಿಯುವುದನ್ನು ನಿಲ್ಲಿಸಲ್ಲ ಭೂಮಿಗೆ.
ಕಡಲಲ್ಲೋ ಅಥವಾ ಮುಗಿಲಲ್ಲೋ ಹೋಯ್ತೀಯಾ
ಅಲ್ಲಾ ರೀ ಸಾಮೀ, ಶತ್ರುಗಳೊಂದಿಗೆ ನಾವ್ಯಾಕೆ ಕಂಪ್ರೊಮೈಸ್ ಮಾಡಕೋಬೇಕು ಎಂದರೆ, ಜೀವನ ಸರಿ ಮಾಡಿಕೊಳ್ಳೋಕೆ ಹೇಳಿದ್ದೇ ಇದಕ್ಕೂ ಆಗಲ್ಲ, ಅಂದರೆ ಕಡಲಲ್ಲೋ ಅಥವಾ ಮುಗಿಲಲ್ಲೋ ಹೋಯ್ತೀಯಾ ಅಂತಾರೆ ಸಾಮೇರು. ಯಾಕೆಂದರೆ ಸಾಮೇರ ಬೈಯ್ದರೇ ಕಾಗೇನೇ ಕಾವ್ ಕಾವ್ ಕಾವ್ ಎಂದು ಕಿರುಚಲಾರಂಭಿಸುತ್ತವೆ ಹೆದರಿಕೆಯಿಂದ. ಅರ್ಥವಾಗಿರಬೇಕಲ್ಲ ಸಾಮೇರ ಹೇಳಿದ್ದು.
ಯೋಗ ಮತ್ತು ಧ್ಯಾನದ ಕಡೆಗೆ ಗಮನ ಕೊಡಿ
ಕುಂಭ ರಾಶಿಯವರು ಯಾವಾಗಲೂ ಯೋಗ ಮತ್ತು ಧ್ಯಾನದ ಕಡೆಗೆ ಗಮನ ಕೊಡಬೇಕು. ಮನಸ್ಸಿನ ಹಿಡಿತವನ್ನು ಕೈಯಲ್ಲಿಟ್ಟುಕೊಂಡಿರಬೇಕು. ಸಾಧ್ಯವಾದಷ್ಟು ಆಧ್ಯಾತ್ಮದೆಡೆಗೆ ಒಲವು ಮೂಡಿಸಿಕೊಂಡು ನಿತ್ಯ ಆಧ್ಯಾತ್ಮದ ಚರ್ಚೆಯನ್ನು ಮಾಡಬೇಕು ತಿಳಿದವರ ಬಳಿ. ಇದರಿಂದ ಮಾನಸಿಕವಾಗಿ ನೆಮ್ಮದಿ ಸಿಗುತ್ತದೆ ಮತ್ತೆ ಆತ್ಮಸ್ಥೈರ್ಯ ಹೆಚ್ಚುತ್ತದೆ ಗೊತ್ತಿರಲಿ. ಸಾಧ್ಯವಾದರೆ ಒಮ್ಮೆ ಗುರುಶಾಂತಿ ಮಾಡಿಸಿಕೊಳ್ಳಿ ಕಿರಿಕಿರಿ ಮೀತಿ ಮೀರುತ್ತಿದೆ ಎಂದು ಅರಿವಾದಾಗ.