ಭವಿಷ್ಯ ನುಡಿಯುವುದು ಆ ಭಗವಂತನ ಅನುಗ್ರಹ. ದಿನ ಬೆಳಗಾಗೆದ್ದು ಭಗವಂತನ ನೆನೆದು ನಿತ್ಯದ ಕಾಯಕದಲ್ಲಿ ತೊಡಗಿಕೊಳ್ಳುವ ಮುನ್ನ ಈ ಭವಿಷ್ಯವನ್ನೊಮ್ಮೆ ನೋಡಿಕೊಳ್ಳಿ. ಇಲ್ಲಿ ಹೇಳುವ ಎಚ್ಚರಿಕೆಯ ಮಾತುಗಳನ್ನೊಮ್ಮೆ ಗಮನದಲ್ಲಿ ಇಟ್ಟುಕೊಳ್ಳಿ. ಸಾಧ್ಯವಾದಷ್ಟೂ ಸಲಹೆಗಳನ್ನು ಅನುಸರಿಸಿ. ಜೀವನದಲ್ಲಿ ಸಮಸ್ಯೆಗಳು ಬಂದು ಹೋಗುವ ನೆಂಟರಂತೆ.
ಆದರೆ, ನಾವು ಮಾಡುವ ಪಾಪ- ಕರ್ಮಗಳು. ತಂದೆ- ತಂದೆ ಮೂಲಕ ನಮಗೆ ಬರುವ ರಕ್ತದ ಗುಣದಂತೆ. ಒಳ್ಳೆ ಕರ್ಮಕ್ಕೆ ಉತ್ತಮ ಫಲ- ಆರೋಗ್ಯ. ಕೆಟ್ಟ ಕರ್ಮಕ್ಕೆ- ಕೆಟ್ಟ ಫಲ, ಸಮಸ್ಯೆ. ಆದರೆ ಅದನ್ನು ಕೂಡ ನಾವು ಹೇಗೆ ವೈದ್ಯರಲ್ಲಿಗೆ ಹೋಗಿ, ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇರಿಸಿಕೊಳ್ಳುತ್ತೀವೋ ಹಾಗೇ ಜೋಪಾನ ಮಾಡಬಹುದು.
ಮೇಷ
ಹೊಸ ಯೋಜನೆಗಳಲ್ಲಿ ಭಾರೀ ವಿಘ್ನ ಕಂಡುಬರುತ್ತಿದೆ. ನಿಶ್ಚಿತ ಆದಾಯದಲ್ಲಿ ಗಣನೀಯ ಇಳಿಕೆಯಾಗಿ, ಚಿಂತೆಗೆ ಕಾರಣವಾಗುತ್ತದೆ. ದೇವಾಲಯದ ಪಾರುಪತ್ತೆದಾರರಿಗೆ ಹೊಸ ಸವಾಲುಗಳು ಎದುರಾಗಲಿವೆ. ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಮೀನ- ಮೇಷ ಎಣಿಸುತ್ತೀರಿ. ಹಲ್ಲು ನೋವು ಕಾಣಿಸಿಕೊಳ್ಳಬಹುದು.
ವೃಷಭ
ಮುಖ್ಯ ದಾಖಲೆ, ಕಾಗದ- ಪತ್ರಗಳನ್ನು ಯಾರಿಗೆ ತೋರಿಸುವ ಮುನ್ನ ಒಮ್ಮೆ ಅದರಲ್ಲಿರುವ ಅಂಶಗಳು ಹಾಗೂ ಅದನ್ನು ಕೇಳುತ್ತಿರುವ ವ್ಯಕ್ತಿಗಳ ಹಿನ್ನೆಲೆ ತಿಳಿದುಕೊಳ್ಳಿ. ನಿಮ್ಮ ಅತ್ಯುತ್ಸಾಹದಿಂದ ಮಹತ್ತರ ಮಾಹಿತಿಗಳು ಅಪಾತ್ರರನ್ನು ಅಥವಾ ಅಪಾಯ ತಂದೊಡ್ಡಬಹುದಾದವರ ಕೈ ತಲುಪಬಹುದು, ಎಚ್ಚರ.
ಮಿಥುನ
ಎಲ್ಲವೂ ಪರ್ಫೆಕ್ಟ್ ಆಗಿ ಇರಬೇಕು ಎಂಬ ಪ್ರಯತ್ನವೇನೋ ಸರಿ. ಆದರೆ ಅದಕ್ಕಾಗಿ ಎಲ್ಲರನ್ನೂ ದೂಷಿಸುವುದು ಉತ್ತಮ ನಾಯಕತ್ವದ ಲಕ್ಷಣ ಅಲ್ಲ. ಉದ್ಯೋಗ ಸ್ಥಳದಲ್ಲಿನ ದೌರ್ಬಲ್ಯಗಳನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ. ಮೇಲಧಿಕಾರಿಗಳ ಆದೇಶವನ್ನು ಪಾಲಿಸುವ ಮುನ್ನ ಪೂರ್ವಾಪರ ಆಲೋಚನೆ ಮಾಡಿ.
ಕರ್ಕಾಟಕ
ನೀವು ಈ ಹಿಂದೆ ಸಹಾಯ ಮಾಡಿದ ವ್ಯಕ್ತಿಗಳು ಈಗ ನಿಮ್ಮ ನೆರವಿಗೆ ಬರಲಿದ್ದಾರೆ. ಹಗಲಿರುಳು ದುಡಿಯುವ ನಿಮ್ಮ ಗುಣ ಮೇಲಧಿಕಾರಿಗಳ ಗಮನಕ್ಕೆ ಬಂದು, ಮೆಚ್ಚುಗೆಯ ಮಾತುಗಳನ್ನಾಡಲಿದ್ದಾರೆ. ದೀರ್ಘಾವಧಿ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮಾರ್ಗಗಳು ದೊರೆಯಲಿವೆ.
ಸಿಂಹ
ನಿಮ್ಮ ನಿರ್ಧಾರ ಮಾಡುವ ಸಾಮರ್ಥ್ಯದಿಂದ ವ್ಯಾಪಾರ- ವ್ಯವಹಾರದಲ್ಲಿ ದೊಡ್ಡ ಪ್ರಮಾಣದ ನಷ್ಟವನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಮಾತಿನ ಮೂಲಕ ಇತರರನ್ನು ಮೋಡಿ ಮಾಡಲಿದ್ದೀರಿ. ದೈವಾನುಗ್ರಹ ನಿಮ್ಮ ಮೇಲಿರಲಿದೆ. ಕೆಲಸ- ಕಾರ್ಯಗಳಿ ಮಾಮೂಲಿನಂತೆ ಸಾಗುತ್ತವೆ. ಒತ್ತಡ ಕಡಿಮೆ ಆಗಲಿದೆ.
ಕನ್ಯಾ
ಯಾವುದೇ ಸಾಲಕ್ಕೆ ಪ್ರಯತ್ನಿಸಿದ್ದಲ್ಲಿ ಅದು ದೊರೆಯುವ ಸಾಧ್ಯತೆಗಳು ಗೋಚರಿಸುತ್ತವೆ. ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಿರುವವರು ಇತರರಿಗೆ ಅದನ್ನು ನೀಡುವಾಗ ಎಚ್ಚರಿಕೆಯಿಂದ ಇರಬೇಕು. ತೀರಾ ಆಪ್ತರಿಗೆ ಸಹಾಯದ ಅಗತ್ಯ ಬೀಳುತ್ತದೆ. ಪ್ರಭಾವವನ್ನು ಬಳಸಿಕೊಳ್ಳಬೇಕಾಗುತ್ತದೆ.
ತುಲಾ
ನಿಮ್ಮದು ಸ್ವಾರ್ಥ ಸ್ವಭಾವ ಎಂದು ಹಣೆಪಟ್ಟಿ ಹಚ್ಚುತ್ತಾರೆ. ಯಾವುದೇ ಸ್ಪಷ್ಟನೆ ನೀಡಿದರೂ ಪ್ರಯೋಜನ ಆಗುವುದಿಲ್ಲ. ಸಹೋದ್ಯೋಗಿಗಳ ಜತೆಗೆ ಭಿನ್ನಾಭಿಪ್ರಾಯ ಸೃಷ್ಟಿಯಾಗುತ್ತದೆ. ನಿಮ್ಮ ವಿರುದ್ಧ ದೂರು ಹೇಳುವ ಸಾಧ್ಯತೆ ಕೂಡ ಇದೆ. ಸಿಟ್ಟಿನ ಕೈಗೆ ಬುದ್ಧಿ ಕೊಡಬೇಡಿ. ತಾಳ್ಮೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಿ.
ವೃಶ್ಚಿಕ
ದಾನ- ಧರ್ಮಾದಿ ಕಾರ್ಯಗಳಲ್ಲಿ ಆಸಕ್ತಿ ಮೂಡುತ್ತದೆ. ನಿಮ್ಮಿಂದ ಆದ ಸಹಾಯವನ್ನು ಮಾಡಲಿದ್ದೀರಿ. ಸೋದರ- ಸೋದರಿಯರ ಜತೆಗೆ ಉತ್ತಮ ಸಮಯ ಕಳೆಯಲಿದ್ದೀರಿ. ಚರ್ಮದ ಸಮಸ್ಯೆ ಇರುವವರು ಆಹಾರ ಸೇವನೆ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದಲ್ಲಿ ಸಮಸ್ಯೆ ಉಲ್ಬಣಿಸುತ್ತದೆ.
ಧನು
ನಿರೀಕ್ಷೆ ಮಾಡದ ಮೂಲಗಳಿಂದ ಹಣಕ್ಕೆ ಬೇಡಿಕೆ ಬರಬಹುದು. ಯಾರಿಗೂ ಹೇಳಿಕೊಳ್ಳಲು ಸಾಧ್ಯವಾಗದಂಥ ಮಾನಸಿಕ ತೊಳಲಾಟಕ್ಕೆ ಸಿಲುಕಿಕೊಳ್ಳುತ್ತೀರಿ. ಕೈಗೆ ಸಿಗದ ಯಾವುದಕ್ಕೂ ಆಸೆ, ಪ್ರಯತ್ನ ಪಡಬೇಡಿ. ಇದರಿಂದ ಬೇಜಾರಾಗುತ್ತದೆ. ಜತೆಗೆ ಸಮಯವೂ ಹಾಳು. ಸಂಗಾತಿ ಜತೆಗೆ ಉತ್ತಮ ಸಮಯ ಕಳೆಯುವಿರಿ.
ಮಕರ
ಸ್ವಾಭಿಮಾನಕ್ಕೆ ಪೆಟ್ಟು ನೀಡುವಂಥ ಮಾತನಾಡುವವರಿಗೆ ತಕ್ಕ ಉತ್ತರ ನೀಡಲಿದ್ದೀರಿ. ಸ್ವಾವಲಂಬನೆಯ ಕಾರಣಕ್ಕೆ ನಿಮ್ಮಲ್ಲೊಂದು ಹೊಸ ಆತ್ಮವಿಶ್ವಾಸ ಮೂಡಲಿದೆ. ಉದ್ಯೋಗದಾತರು ನಿಮ್ಮಿಂದ ನಿರೀಕ್ಷೆ ಮಾಡುವ ಬೆಂಬಲ ನೀಡುವಲ್ಲಿ ಸಫಲರಾಗುತ್ತೀರಿ. ಇದರಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತವೆ.
ಕುಂಭ
ಏನು ಕೆಲಸ ಮಾಡಿದರೂ ಬಹಳ ಏಕಾಗ್ರತೆಯಿಂದ ಇರಬೇಕು. ಹೊಸಬರ ಜತೆಗೆ ಅತಿಯಾದ ಸಲುಗೆ ಬೇಡ. ನಿಮ್ಮ ಮಿತಿಯನ್ನು ಅರಿತು, ಯಾರಿಗಾದರೂ ಮಾತು ನೀಡಿ. ಗುರು- ಹಿರಿಯರು ನೀಡುವ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ. ವೃತ್ತಿಪರರಿಗೆ ಹೊಸ ಸವಾಲುಗಳು ಎದುರಾಗುತ್ತವೆ.
Recommended Video
ಮೀನ
ಯಾರೂ ನಿಮ್ಮನ್ನು ವಿಮರ್ಶೆ ಮಾಡಬಾರದು ಎಂಬ ಧೋರಣೆ ಖಂಡಿತಾ ಸರಿಯಲ್ಲ. ಹೇಗೆ ಇತರರ ಸರಿ- ತಪ್ಪುಗಳ ಬಗ್ಗೆ ನೀವು ಮಾತನಾಡುತ್ತೀರೋ, ಇದು ಕೂಡ ಹಾಗೆ. ಯಾವುದೇ ನೆಪ ಹೇಳದೆ ಚಟುವಟಿಕೆಯಿಂದ ಇರಲು ಪ್ರಯತ್ನಿಸಿ. ಹೊಸದೊಂದು ಗೆಳೆತನವಾಗಿ, ಭವಿಷ್ಯದಲ್ಲಿ ನಿಮಗೆ ಬಹಳ ಉಪಯೋಗವಾಗುತ್ತದೆ.
RECOMMENDED STORIES